ನವೆ೦ಬರ್ 5ರಿಂದ ಚಿಟ್ಟಾಣಿ ಯಕ್ಷಗಾನ ಸಪ್ತಾಹ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಒಕ್ಟೋಬರ್ 26 , 2013
|
ಉಡುಪಿಯ ಚಿಟ್ಟಾಣಿ ಅಭಿಮಾನ ಬಳಗ, ಯಕ್ಷಗಾನ ಕಲಾ ರಂಗ ಹಾಗೂ ಪರ್ಯಾಯ ಸೋದೆ ಮಠದ ಆಶ್ರಯದಲ್ಲಿ ನ.5ರಿಂದ 11ರವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಚಿಟ್ಟಾಣಿ ಯಕ್ಷಗಾನ ಸಪ್ತಾಹ ನಡೆಯಲಿದೆ ಎಂದು ಅಭಿಮಾನಿ ಬಳಗದ ಸಂಚಾಲಕ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ಅವರು, ನ.5ರಂದು ಸಂಜೆ 6 ಗಂಟೆಗೆ ಪರ್ಯಾಯ ಸೋದೆ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್ ಹಾಗೂ ಚೆನ್ನೈ ಕರ್ನಾಟಕ ಸಂಘದ ಅಧ್ಯಕ್ಷ ಪಿ. ನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಯಕ್ಷಗಾನ ಪ್ರಿಯರಿಗೆ ರಸದೌತಣ: 80ರ ಸಂಭ್ರಮದಲ್ಲಿರುವ ಚಿಟ್ಟಾಣಿ ಅವರು ಪ್ರಧಾನ ಭೂಮಿಕೆಯಲ್ಲಿರುವ 7 ಯಕ್ಷಗಾನ ಪ್ರಸಂಗಗಳು ನ.5ರಿಂದ 11ರವರೆಗೆ ಯಕ್ಷಗಾನ ಹಾಗೂ ಚಿಟ್ಟಾಣಿ ಅಭಿಮಾನಿಗಳ ಮನವನ್ನು ತಣಿಸಲಿವೆ. ನ.5ರಂದು 'ಮಾಗಧ ವಧೆ', ನ.6ರಂದು 'ಶಲ್ಯ ಪರ್ವ-ಗದಾಪರ್ವ'ದ ಪೂರ್ವಾರ್ಧ, ನ.7ರಂದು 'ಗದಾ ಪರ್ವ(ಉತ್ತರಾರ್ಧ)-ರಕ್ತರಾತ್ರಿ', ನ.8ರಂದು 'ಶನೀಶ್ವರ ಮಹಾತ್ಮೆ', ನ.9ರಂದು 'ರಾಜಾ ಬೃಹದ್ರಥ ', ನ.10ರಂದು 'ಪಂಚವಟಿ ' ಹಾಗೂ ನ.11ರಂದು 'ಲವಕುಶ' ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಈ ಎಲ್ಲ ಪ್ರದರ್ಶನಗಳು ಶ್ರೀವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಡೆಯಲಿವೆ.
ಮಂಡಳಿಯ ಕಲಾವಿದರಾದ ಸುಬ್ರಹ್ಮಣ್ಯ ಚಿಟ್ಟಾಣಿ, ಅಶೋಕ್ ಭಟ್ ಸಿದ್ಧಾಪುರ, ಶ್ರೀಧರ ಭಟ್ ಕಾಸರಕೋಡು, ಕಾರ್ತಿಕ್ ಚಿಟ್ಟಾಣಿ ಪ್ರತಿದಿನ ಭಾಗವಹಿಸಲಿದ್ದಾರೆ. ಕಲಾವಿದರಾದ ತೀರ್ಥಹಳ್ಳಿ ಗೋಪಾಲಾಚಾರ್ಯ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಕಪ್ಪೆಕೆರೆ ಮಾಧವ ಹೆಗಡೆ, ಚಿಟ್ಟಾಣಿ ಪ್ರಭಾಕರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಥಂಡಿಮನೆ ಶ್ರೀಪಾದ ಭಟ್, ಬಳ್ಕೂರು ಕೃಷ್ಣಯಾಜಿ, ಶಶಿಕಾಂತ ಶೆಟ್ಟಿ ಕಾರ್ಕಳ, ಹಡಿನಬಾಳ ಶ್ರೀಪಾದ ಹೆಗಡೆ, ಬೇಗಾರ್ ಶಿವಕುಮಾರ್, ನರಸಿಂಹ ಚಿಟ್ಟಾಣಿ, ಎಂ.ಎಲ್.ಸಾಮಗ, ಕೃಷ್ಣಮೂರ್ತಿ ಉರಾಳ, ಮುಗ್ವಾ ಗಣೇಶ್ ನಾಯ್ಕ, ಶಿರಳಗಿ ಭಾಸ್ಕರ ಜೋಶಿ, ತೋಟಿಮನೆ ಗಣಪತಿ ಹೆಗಡೆ, ಚಪ್ಪರಮನೆ ಶ್ರೀಧರ ಹೆಗಡೆ ಭಾಗವಹಿಸಲಿದ್ದಾರೆ.
ಹಿಮ್ಮೇಳನದಲ್ಲಿ ಕಲಾವಿದರುಗಳಾದ ಸುಬ್ರಹ್ಮಣ್ಯ ಧಾರೇಶ್ವರ, ರಾಘವೇಂದ್ರ ಆಚಾರ್, ಕೆ.ಜೆ. ಗಣೇಶ್, ಸರ್ವೇಶ್ವರ ಹೆಗಡೆ, ಸತೀಶ್ ಕೆದ್ಲಾಯ, ಸುನೀಲ್ ಭಂಡಾರಿ, ಶಂಕರ ಭಾಗವತ ಯಲ್ಲಾಪುರ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚಿಟ್ಟಾಣಿ ಅಭಿಮಾನ ಬಳಗದ ನಾರಾಯಣ ಎಂ.ಹೆಗಡೆ ಹಾಗೂ ಗಂಗಾಧರ ರಾವ್ ಉಪಸ್ಥಿತರಿದ್ದರು.
ಚಿಟ್ಟಾಣಿ ಪ್ರಶಸ್ತಿ: ನವೆಂಬರ್ 11ರಂದು ಸಂಜೆ 6 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಈ ಸಂದರ್ಭ ಚಿಟ್ಟಾಣಿ ಅಭಿಮಾನಿಗಳು ಹುಟ್ಟು ಹಾಕಿರುವ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಯನ್ನು ಅವರ ಸಮಕಾಲೀನ ಪ್ರಸಿದ್ಧ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಅವರಿಗೆ ಪ್ರದಾನ ಮಾಡಲಾಗುವುದು.
ಚಿಟ್ಟಾಣಿ ಅಭಿಮಾನಿ ಬಳಗದ ಗೌರವಾಧ್ಯಕ್ಷ ಟಿ.ವಿ. ರಾವ್ ಅವರ ಹೆಸರಿನಲ್ಲಿ ಅವರ ಮಕ್ಕಳು ಸ್ಥಾಪಿಸಿರುವ 'ಟಿ.ವಿ. ರಾವ್' ಪ್ರಶಸ್ತಿಯನ್ನು ನಿವೃತ್ತ ಅಧ್ಯಾಪಕ, ಅರ್ಥಧಾರಿ ಕೆ. ರಘುರಾಮ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಗುವುದು. ಈ ಎರಡು ಪ್ರಶಸ್ತಿಗಳು ತಲಾ 10,000 ರೂ. ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿವೆ. ಸಮಾರಂಭದಲ್ಲಿ ಅಂಬಲಪಾಡಿ ಹೈಟೆಕ್ ಆಸ್ಪತ್ರೆಯ ನಿರ್ದೇಶಕ ಡಾ. ಟಿ.ಎಸ್. ರಾವ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಕಿಶನ್ ಹೆಗ್ಡೆ ಕೊಳ್ಕೆಬೈಲು ಹಾಗೂ ನ್ಯಾಯವಾದಿ ರವಿರಾಜ್ ಕುಮಾರ್ ಭಾಗವಹಿಸಲಿದ್ದಾರೆ.
ಕೃಪೆ : http://vijaykarnataka.indiatimes.com
|
|
|